ಕಣಿವೆ, ಆ. ೩೧: ಪ್ರಾಚೀನ ಕಾಲದಿಂದಲೂ ನಡೆಯುತ್ತಿರುವ ಆನೆ - ಮಾನವ ಸಂಘರ್ಷಕ್ಕೆ ವೈಜ್ಞಾನಿಕವಾದ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಹಾರಂಗಿಯ ಸಾಕಾನೆ ಶಿಬಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ "ವಿಶ್ವ ಆನೆ ದಿನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ, ನಿಯಂತ್ರಣ ಹಾಗೂ ಸೂಕ್ತ ನಿರ್ವಹಣೆಗೆ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯ ಮಂತ್ರಿಗಳು ಹಾಗೂ ಅರಣ್ಯ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳುವ ಬಗ್ಗೆ ಸರ್ಕಾರ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವೀರಾಜಪೇಟೆ ಶಾಸಕ ಪೊನ್ನಣ್ಣ ಅವರು ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಂಕೇತ್ ಪೂವಯ್ಯ ಹೇಳಿದರು.
ಇಲಾಖೆಯ ಮಾಹಿತಿಯ ಪ್ರಕಾರ ಕಳೆದ ೩ ವರ್ಷಗಳಲ್ಲಿ ೨೮೩ ಆನೆಗಳು ಸಾವನ್ನಪ್ಪಿವೆ. ಇದರಲ್ಲಿ ಬಹುತೇಕ ಆನೆಗಳು ಸಹಜವಾಗಿ ಸಾವನ್ನಪ್ಪಿದ್ದು, ೩೦ ಆನೆಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದರೆ, ೬ ಆನೆಗಳು ಹತ್ಯೆಗೊಳಗಾಗಿವೆ. ಕರ್ನಾಟಕದಲ್ಲಿ ೬೩೯೫ ಆನೆಗಳಿವೆ. ಹೆಚ್ಚಿನ ಆನೆಗಳನ್ನು ಹೊಂದಿರುವ ರಾಜ್ಯವಾಗಿ ಕರ್ನಾಟಕ ಭಾರತದಲ್ಲಿ ಗುರುತಿಸಿಕೊಂಡಿದೆ. ಪ್ರತಿವರ್ಷ
(ಮೊದಲ ಪುಟದಿಂದ) ಅಂದಾಜು ೩೦ ಮಂದಿ ರಾಜ್ಯದಲ್ಲಿ ಆನೆ ದಾಳಿಗೆ ತುತ್ತಾಗುತ್ತಿದ್ದಾರೆ. ಪ್ರಸಕ್ತ ವರ್ಷ ಆಗಸ್ಟ್ವರೆಗೆ ೨೫ ಮಂದಿ ಆನೆ ದಾಳಿಗೆ ತುತ್ತಾಗಿದ್ದಾರೆ ಎಂದರು. ಆನೆಗಳ ಸಂರಕ್ಷಣೆಗೆ ವೈಜ್ಞಾನಿಕವಾದ ಕ್ರಮವಾಗಬೇಕಿದೆ. ಕಾಡಾನೆಗಳ ರಕ್ಷಣೆ ಕೇವಲ ಇಲಾಖೆ ಅಥವಾ ಸರ್ಕಾರದ್ದಲ್ಲ. ಇದರಲ್ಲಿ ಕಾಡಂಚಿನ ಜನರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದು ಸಂಕೇತ್ ಹೇಳಿದರು. ರೈಲ್ವೇ ಹಳಿ ಬೇಲಿ ರಾಜ್ಯದಲ್ಲಿ ಪ್ರಸುತ ೩೩೩ ಕಿ.ಮೀ. ಇದೆ. ೧೨೦ ಕಿ.ಮೀ. ಕೆಲಸ ಪ್ರಗತಿಯಲ್ಲಿದೆ. ೨೫೦ ಕಿ.ಮೀ. ರೈಲ್ವೇ ಹಳಿಬೇಲಿ ನಿರ್ಮಾಣಕ್ಕೆ ರಿಯಾಯಿತಿಯಲ್ಲಿ ರೈಲ್ವೇ ಹಳಿ ಕೊಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ದುಬಾರೆ ಆನೆ ಶಿಬಿರದ ವೈದ್ಯ ಡಾ.ಚೆಟ್ಟಿಯಪ್ಪ ಆನೆಗಳ ಬದುಕು ಹಾಗೂ ಆವಾಸಸ್ಥಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದೇ ವೇಳೆ ಆನೆಗಳ ಬಗೆಗಿನ ವಿದ್ಯಾರ್ಥಿಗಳ ಕೆಲವು ಕೌತುಕ ಪ್ರಶ್ನೆಗಳಿಗೆ ಚೆಟ್ಟಿಯಪ್ಪ ಉಪಸ್ಥಿತರಿದ್ದರು.
ಮಡಿಕೇರಿ ಪ್ರಾದೇಶಿಕ ಅರಣ್ಯ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಕೊಡಗು ಆನೆ ಕಾರ್ಯಪಡೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಅನುಷಾ, ವೀರಾಜಪೇಟೆ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್.ಜಗನ್ನಾಥ್, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಯ್ಯದ್ ಅಹಮದ್ ಶಾ ಹುಸೇನ್, ಮಡಿಕೇರಿ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್, ಅರಣ್ಯಾಧಿಕಾರಿ ಎನ್.ಸಿ.ಶಮನ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಇದ್ದರು.
ಮಡಿಕೇರಿ ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.ಆನೆಗಳಿಗೆ ಅಲಂಕಾರ
ಆನೆ ದಿನದ ಅಂಗವಾಗಿ ಶಿಬಿರದ ಸಾಕಾನೆಗಳಾದ ಲಕ್ಷö್ಮಣ, ಈಶ್ವರ, ಏಕದಂತ, ವಿಕ್ರಮ, ರಾಮ ಹಾಗೂ ಕರ್ಣ ಎಂಬ ಆನೆಗಳಿಗೆ ಸ್ನಾನ ಮಾಡಿಸಿ ಹರಳೆಣ್ಣೆ ಹಚ್ಚಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಆರು ಆನೆಗಳ ಪೈಕಿ ಕರ್ಣ ಎಂಬ ಗಂಡಾನೆಗೆ ಮದ ಬಂದ ಕಾರಣ ಅಂತರ ಕಾಯ್ದುಕೊಳ್ಳಲಾಗಿತ್ತು.
ಈ ವೇಳೆ ಆನೆಗಳ ಮಾವುತರಾದ ಪುಟ್ಟ, ವಿಶ್ವನಾಥ, ನಾಗರಾಜ, ಸಂಜು, ಮಂಜ ಹಾಗೂ ಮಂಜು ನೇತೃತ್ವದಲ್ಲಿ ಅಲಂಕೃತ ಸಾಕಾನೆಗಳು ಅತಿಥಿಗಳಿಗೆ ಸೊಂಡಿಲೆತ್ತಿ ನಮಸ್ಕರಿಸುತ್ತಿದ್ದುದು ಕಂಡು ಬಂತು.
ಕೂಡುಮAಗಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಕುರಿತಾದ ಜಾಗೃತಿ ಮೂಡಿಸುವ ಫಲಕಗಳೊಂದಿಗೆ ಘೋಷಣೆ ಕೂಗಿದರು. ಇದೇ ವೇಳೆ ಸಾಕಾನೆಗಳಿಗೆ ಅತಿಥಿಗಳು ಹಾಗೂ ಅಧಿಕಾರಿಗಳು ವಿವಿಧ ಹಣ್ಣುಗಳನ್ನು ತಿನ್ನಿಸಿದರು.
-ವರದಿ : ಕೆ.ಎಸ್.ಮೂರ್ತಿ