ಮಡಿಕೇರಿ, ಆ. ೩೧: ಈ ಬಾರಿಯ ದಸರಾ ಉತ್ಸವದಲ್ಲಿ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರಿಗೆ ದಶಮಂಟಪ ಸಮಿತಿಯ ಅಧ್ಯಕ್ಷ ಜಿ.ಸಿ. ಜಗದೀಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಕಳೆದ ವರ್ಷ ದಶಮಂಟಪಗಳ ಪೈಪೋಟಿ ನಡುವೆ ಅಬ್ಬರದ ಧ್ವನಿವರ್ಧಕ(ಡಿಜೆ) ಬಳಸಿದ ಕಾರಣ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಬಾರಿ ಸಮಿತಿ ಸಭೆಯ ನಿರ್ಣಯದಂತೆ ಕಥಾ ದೃಶ್ಯಾವಳಿ ಸಂದರ್ಭ ಮಿತವಾದ ಸಂಗೀತ ಬಳಸಲು ಅವಕಾಶ ಒದಗಿಸಿಕೊಡಬೇಕು. ದಸರಾ ಮರುದಿನ ಮಂಟಪಗಳು ಕಳಸ ಸಹಿತ ದೇವಾಲಯಕ್ಕೆ ಮರಳುವವರೆಗೂ ಇದನ್ನು ಪಾಲಿಸಲು ಒಮ್ಮತದಿಂದ ನಿರ್ಧರಿಸಲಾಗಿದೆ. ಈ ಬಗ್ಗೆ ಶಾಸಕರು ದಸರಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಮಿತ ಸಂಗೀತಕ್ಕೆ ಅವಕಾಶ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ದಸರಾ ಜನೋತ್ಸವಕ್ಕೆ ವಿಶೇಷ ಮೆರುಗು ನೀಡುವ ದಶಮಂಟಪಗಳಿಗೆ ತಲಾ ೮ ಲಕ್ಷ ರೂ. ಮತ್ತು ೪ ಶಕ್ತಿ ದೇವತೆಗಳ ಕರಗಗಳನ್ನು ಹೊರಡಿಸುವ ದೇವಾಲಯಗಳಿಗೆ ತಲಾ ೫ ಲಕ್ಷ ರೂ. ಅನುದಾನ ನೀಡಬೇಕೆಂದು ದಶಮಂಟಪ ಸಮಿತಿ ಪದಾಧಿಕಾರಿಗಳು ಶಾಸಕರಲ್ಲಿ ಕೋರಿದರು.

ತೀವ್ರ ಮಳೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದಿದ್ದು, ದಸರಾ ಉತ್ಸವಕ್ಕೂ ಮೊದಲೇ ಡಾಂಬರೀಕರಣ ಮಾಡಬೇಕು. ಶೋಭಾಯಾತ್ರೆ ನಡೆಯುವ ಮುಖ್ಯ ರಸ್ತೆಗಳು ಮತ್ತು ಬನ್ನಿ ಕಡಿದು ಕಳಸ ಸಹಿತ ಮಂಟಪಗಳು ಮರಳುವ ರಸ್ತೆಗಳಲ್ಲಿ ಕಳೆದ ವರ್ಷ ವಾಹನಗಳು ಸಂಚರಿಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಮಂಟಪಗಳು ಮರಳುವ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಜಿ.ಸಿ.ಜಗದೀಶ್ ಹಾಗೂ ಪದಾಧಿಕಾರಿಗಳು ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.