ಸಿದ್ದಾಪುರ, ಸೆ. ೪: ಬೈರಂಬಾಡದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಾನೆಗಳು ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ ಕೃಷಿ ಫಸಲಗಳನ್ನು ನಾಶಗೊಳಿಸಿವೆ.

ಬೈರಂಬಾಡ ಗ್ರಾಮ ನಿವಾಸಿ ಜಮುನಾ ಬೆಳ್ಳಿಯಪ್ಪ ಎಂಬವರ ಮನೆ ಅಂಗಳಕ್ಕೆ ಮರಿಯಾನೆ ಸೇರಿದಂತೆ ಮೂರು ಕಾಡಾನೆಗಳು ಮನೆಯ ಅಂಗಳಕ್ಕೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಹಣ್ಣು ಹಂಪಲು ಗಿಡಗಳನ್ನು ಹಾಗೂ ಹೂ ಗಿಡಗಳನ್ನು ಧ್ವಂಸಗೊಳಿಸಿವೆ ಎಂದು ಜಮುನಾ ಬೆಳ್ಳಿಯಪ್ಪ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೆ ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಿವೆ. ಕಾಡಾನೆಗಳು ಮನೆಗಳ ಅಂಗಳದಲ್ಲಿ ಸುತ್ತಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಗಳಲ್ಲಿ ಸೆರೆ ಆಗಿವೆ.