ಸುಂಟಿಕೊಪ್ಪ, ಅ. ೧೩: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ, ಆತ್ಮಹತ್ಯೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಶನಿವಾರ ತಡರಾತ್ರಿ ಹಾಸನ ಜಿಲ್ಲೆಯ ಅರಸಿಕೆರೆಯಿಂದ ಮಡಿಕೇರಿ ದಸರಾ ವೀಕ್ಷಣೆಗೆಂದು ಇಬ್ಬರು ಯಮಹಾ ಆರ್‌ಎಕ್ಸ್ ಬೈಕ್‌ನಲ್ಲಿ ಬರುತ್ತಿದ್ದಾಗ ಗದ್ದೆಹಳ್ಳದ ಬಳಿ ಬೈಕ್, ಸವಾರನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿಯಾಗಿ ಬೈಕ್ ಮೋರಿಯೊಳಗೆ ಬಿದ್ದಿದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಗೋಪಿನಾಥ್ (೩೧) ಎಂಬಾತ ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೀವ್ರ ಗಾಯಗೊಂಡ ಬೈಕ್ ಸವಾರರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮಡಿಕೇರಿ ದಸರಾ ಸಮಾರಂಭ ಮುಗಿಸಿ ಪಿಕ್‌ಅಪ್‌ನಲ್ಲಿ ೯ ಮಂದಿ ಹುಣಸೂರಿಗೆ ಹಿಂತಿರುಗುತ್ತಿದ್ದ ಸಂದರ್ಭ ಕೊಡಗರಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿಯಾಗಿದ್ದು, ಪಿಕಪ್ ವಾಹನದಲ್ಲಿದ್ದ ಚಂದನ್(೨೧) ಎಂಬಾತÀ ಸ್ಥಳದಲ್ಲೇ ಸಾವನ್ನಪ್ಪಿ ಇತರ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕಂಬಿಬಾಣೆ ಆಟೋಚಾಲಕ ಸುದೀಶ್ (೪೫) ಎಂಬವರು ಕಂಬಿಬಾಣೆಯಲ್ಲಿನ ದಸರಾ ಸಮಾರಂಭವನ್ನು ಮುಗಿಸಿ ಮನೆಗೆ ತೆರಳಿ ಯಾರು ಇಲ್ಲದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಹಾಗೂ ಈರ್ವರು ಪುತ್ರರನ್ನು ಆಗಲಿದ್ದಾರೆ.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.