ಕಣಿವೆ, ಅ. ೧೫: ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಡಗು ಜಿಲ್ಲೆಯಿಂದ ಪ್ರತಿದಿನ ೫ ರಿಂದ ೭ ಕೋಟಿ ರೂಪಾಯಿಗಳ ತೆರಿಗೆ ಹಣ ಪಾವತಿಯಾಗುತ್ತಿದ್ದರೂ ಕೂಡ ಜಿಲ್ಲೆಗೆ ಸರ್ಕಾರದಿಂದ ಯಾವುದೇ ಪ್ರಯೋಜನಗಳು ಆಗುತ್ತಿಲ್ಲ ಎಂದು ವರ್ತಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು.

ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಚೇಂಬರ್‌ನ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್. ನಾಗೇಶ್ ಅವರಿಗೆ ಸಮಾನ ಮನಸ್ಕರು ನೀಡಿದ ಅಭಿನಂದನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ವ್ಯಾಪಾರ ವಹಿವಾಟುಗಳು ನಡೆಯುವ ಕುಶಾಲನಗರದ ಪ್ರಮುಖ ವಾಣಿಜ್ಯ ವಹಿವಾಟಿನ ರಥಬೀದಿ ಯಲ್ಲಿ ವಾಹನ ನಿಲುಗಡೆ ಸಮಸ್ಯೆಯಿಂದಾಗಿ ವರ್ತಕರಿಗೆ ಬಹಳಷ್ಟು ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಸ್ಥಳೀಯ ಪುರಸಭೆಯ ಸಹಕಾರದೊಂದಿಗೆ ಸ್ಥಾನೀಯ ಸಮಿತಿ ವಾಹನ ನಿಲುಗಡೆಗೆ ಪೂರಕವಾದ ವಿವಿಧೋದ್ದೇಶ ಕಟ್ಟಡ ನಿರ್ಮಿಸಿ ವಾಹನ ನಿಲುಗಡೆಗೆ ಅವಕಾಶ ಗಳಾಗಬೇಕಿದೆ. ಹಾಗೆಯೇ ಕುಶಾಲನಗರ ಪಟ್ಟಣದಲ್ಲಿ ಸ್ವಂತದ್ದಾದ ವರ್ತಕರ ಸಂಘದ ಸ್ವಂತ ಕಟ್ಟಡ ನಿರ್ಮಾಣದ ಯೋಜನೆ ರೂಪು ಗೊಳ್ಳಲು ನಾಗೇಂದ್ರ ಪ್ರಸಾದ್ ಕರೆಕೊಟ್ಟರು. ಮತ್ತೋರ್ವ ಅತಿಥಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕುಶಾಲನಗರ ಚೇಂಬರ್ಸ್ ಸ್ಥಾನ ಬಹಳಷ್ಟು ಜವಾಬ್ದಾರಿಯ ಸಮಿತಿಯಾಗಿದ್ದು ಬಹಳಷ್ಟು ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಜಿಲ್ಲೆಯಲ್ಲಿಯೇ ಮುಂಚೂಣಿಯ ನಗರವಾಗಿರುವ ಕುಶಾಲನಗರದ ಸರ್ವಾಂಗೀಣ ಪ್ರಗತಿಗೆ ಮುಂದಾಗಬೇಕೆAದು ಕರೆಕೊಟ್ಟರು. ಈ ಸಂದರ್ಭ ಕೊಡಗು ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಆವರ್ತಿ ಮಹದೇವಪ್ಪ, ಜಿಲ್ಲಾ ಕಾರ್ಯದರ್ಶಿ ಲವಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪುರಸಭೆ ಮಾಜಿ ಸದಸ್ಯರೂ ಆದ ಕಲಾವಿದ ಎಂ. ನಂಜುAಡಸ್ವಾಮಿ, ಶಾಂತಪ್ಪ, ವಿಜಿ, ರಾಜು, ಹರೀಶ್, ಈಶಕುಮಾರ್, ಮಾಧು, ಪ್ರಶಾಂತ್, ವಸಂತ್, ಶಿವು ಇದ್ದರು.

ಗಾಯಕ ಸತೀಶ್ ಹಾಗೂ ನಂಜುAಡಸ್ವಾಮಿ ಅವರಿಂದ ಭಾವಗೀತೆ ಗಾಯನ ನಡೆಯಿತು.