ನಾಪೋಕ್ಲು, ಅ. ೧೫: ಕೊಡಗಿನ ವ್ಯಕ್ತಿಯೋರ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಡ್ಯದ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಸಂಭವಿಸಿದೆ.

ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಾಪಂಡ ಸೋಮಯ್ಯ ಎಂಬವರ ಪುತ್ರ ನಾಪಂಡ ಗೌತಮ್ ಗಣಪತಿ (೩೨) ಎಂಬವರು ಮೈಸೂರಿನಲ್ಲಿ ಹೊಟೇಲ್ ಮ್ಯಾನೆಜ್ಮೆಂಟ್ ಉದ್ಯೋಗದಲ್ಲಿದ್ದು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ರೈಲಿನಲ್ಲಿ ಹಿಂತಿರುಗುವ ಸಂದರ್ಭ ರೈಲಿನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಕಂಡ ಸಹ ಪ್ರಯಾಣಿಕರು ಮಂಡ್ಯ ಪೊಲೀಸರಿಗೆ ವಿಷಯ ತಿಳಿಸಿ ಪರಿಶೀಲಿಸಿದಾಗ ಅವರ ಮೊಬೈಲ್ ನಾಪತ್ತೆಯಾಗಿತ್ತು. ಆಧಾರ್ ಕಾರ್ಡ್ ಪರಿಶೀಲಿಸಿದಾಗ ಯುವಕ ನಾಪಂಡ ಗೌತಮ್ ಗಣಪತಿ ಎಂದು ಮಾಹಿತಿ ಲಭ್ಯವಾಗಿದೆ. ಬಳಿಕ ಪೊಲೀಸರು ಅವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಇದೀಗ ಅವರ ಪೋಷಕರು ಗೌತಮ್‌ನನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. - ದುಗ್ಗಳ