ಮಡಿಕೇರಿ, ಅ. ೧೫: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ(ಭಾ.ಕೃ.ಅ.ತೋ.ಸA.ಸA.)ದ ವತಿಯಿಂದ ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿದ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬುಟಾನ್ ಹಣ್ಣಿನ ಕ್ಷೇತ್ರೋತ್ಸವವು ‘ಅಧಿಕ ಮೌಲ್ಯದ ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘ, ಭಾ.ಕೃ.ಅ.ಪ. ಭಾ.ತೋ.ಸಂ.ಸA. ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿ, ಕೊಡಗು ಹಾಗೂ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಸಹಯೋಗದೊಂದಿಗೆ ತಾ. ೧೯ ರಂದು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರೈತರ ಹಕ್ಕುಗಳ ಕಾಯ್ದೆಯ ಅಧ್ಯಕ್ಷರಾದ ಡಾ. ಟ್ರಿಲೋಚನ್ ಮೊಹಪತ್ರ, ಬೆಂಗಳೂರು ಭಾ.ಕೃ.ಅ.ಪ.-ಭಾ.ತೋ.ಸಂ.ಸA. ನಿರ್ದೇಶಕರಾದ ಪ್ರೊ.ಟಿ.ಕೆ.ಬೆಹೆರ, ಗೌರವ ಅತಿಥಿಗಳಾಗಿ ನವ ದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರೈತರ ಹಕ್ಕುಗಳ ಕಾಯ್ದೆಯ ಜಂಟಿ ಕುಲಸಚಿವರಾದ ಡಾ. ದಿಪಾಲ್ ರಾಯ್ ಚೌದುರಿ, ಕಾಫಿ ಬೋರ್ಡ್ ಮಾಜಿ ಉಪಾಧ್ಯಕ್ಷರಾದ ಬೋಸ್ ಮಂದಣ್ಣ, ಪ್ರಗತಿಪರ ರೈತರು, ಸುಂಟಿಕೊಪ್ಪ, ಹಣ್ಣು ವಿಭಾಗ, ಮುಖ್ಯಸ್ಥರು ಮತ್ತು ಬೆಂಗಳೂರಿನ ಭಾ.ಕೃ.ಅ.ಪ.ಭಾ.ತೋ.ಸಂ.ಸA. ವಿಜ್ಞಾನಿಗಳು, ಇತರರು ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಂಬುಟಾನ್, ಮ್ಯಾಂಗೋಸ್ಟೀನ್, ಬೆಣ್ಣೆ ಹಣ್ಣು ಮತ್ತು ವಿವಿಧ ಹಣ್ಣುಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ರೈತರು ತಮ್ಮ ವಿವಿಧ ಹಣ್ಣಿನ ಮಾದರಿಗಳನ್ನು ತಂದು ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗಿದೆ. ಉತ್ತಮ ಮಾದರಿಗಳಿಗೆ ಪ್ರಥಮ ಬಹುಮಾನ ರೂ. ೫ ಸಾವಿರ, ದ್ವಿತೀಯ ಬಹುಮಾನ ರೂ. ೩ ಸಾವಿರ, ತೃತೀಯ ಬಹುಮಾನ ರೂ. ೨ ಸಾವಿರಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಬಗ್ಗೆ ಡಾ. ದಿಪಾಲ್ ರಾಯ್ ಚೌದುರಿ ಮತ್ತು ರಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ಹಣ್ಣಿನ ವೈಜ್ಞಾನಿಕ ಕೃಷಿಯ ಬಗ್ಗೆ ಹಣ್ಣು ವಿಜ್ಞಾನಿ ಡಾ. ಮುರಳೀಧರ ಬಿ.ಎಂ. ಅವರು ವಿಷಯ ಮಂಡನೆ ಮಾಡಲಿದ್ದಾರೆ.

ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಮತ್ತು ರಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ಹಣ್ಣುಗಳ ಕ್ಷೇತ್ರ ಭೇಟಿ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ೭೮೯೨೮೮೨೩೫೧/ ೯೦೦೫೮೪೭೨೮೩ ನ್ನು ಸಂಪರ್ಕಿಸಬಹುದು.