ನಾಪೋಕ್ಲು, ಅ. ೧೭: ಗೋಪಾಲಕೃಷ್ಣ ಯುವ ಸಂಘದ ವತಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಅವಂದೂರು ಗ್ರಾಮದಲ್ಲಿ ಜರುಗಿತು.

ಅವಂದೂರು ದವಸ ಭಂಡಾರದ ಅಧ್ಯಕ್ಷ ಬೆಳ್ಯನ ಚಂದ್ರಪ್ರಕಾಶ್ ಅವರು ತೆಂಗಿನಕಾಯಿಗೆ ಗುಂಡು ಹೊಡೆ ಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಳಿಕ ವಿವಿಧ ಕಡೆಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳಿಂದ ಗುಂಡು ಹೊಡೆಯುವ ಸ್ಪರ್ಧೆ ಜರುಗಿತು.

ಸಮಾರೋಪ ಸಮಾರಂಭ ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷ ದೇವಾಯಿರ ಕೀರ್ತನ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಕೆದಂಬಾಡಿ ಎಸ್. ಪುಟ್ಟಯ್ಯ, ನಿವೃತ್ತ ಸೂಪರಿಂಟೆAಡೆAಟ್ ಆಫ್ ಪೊಲೀಸ್ ಚೊಕ್ಕಾಡಿ ಎನ್. ಅಪ್ಪಯ್ಯ, ಅವಂದೂರು ಪಂಚಾಯಿತಿ ಸದಸ್ಯ ರಾದ ಊರೊಳನ ತೇಜಕುಮಾರ್, ದೇವಾಯಿರ ಮೋಹಿನಿ ರಾಘವಯ್ಯ, ಕಾಳೇರಮ್ಮನ ಅನಂತ ಕುಮಾರ್ ಮತ್ತು ದಾನಿಗಳು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು. ಪಟ್ಟಡ ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದವರ ವಿವರ

ಸ್ಪರ್ಧೆಯಲ್ಲಿ .೨೨ ರೈಫಲ್, ತೋಟದ ಕೋವಿ, ಏರ್‌ಗನ್‌ನಿಂದ ಮೊಟ್ಟೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. .೨೨ ರೈಫಲ್‌ನ ಮೊದಲ ಬಹುಮಾನವನ್ನು ಪುತ್ತರೀರ ನಂಜಪ್ಪ, ದ್ವಿತೀಯ ಬಹುಮಾನವನ್ನು ಮೂಲೆಮಜಲು ಬಾಲಕೃಷ್ಣ, ಮೂರನೇ ಬಹುಮಾನವನ್ನು ಶ್ಲೋಕ್ ಸುಬ್ಬಯ್ಯ ಪಡೆದುಕೊಂಡರು.

ತೋಟದ ಕೋವಿಯ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಭಜನ್ ಅಪ್ಪುಮಣಿಯಂಡ, ದ್ವಿತೀಯ ಬಹುಮಾನವನ್ನು ಬ್ರಿಜೇಶ್, ಮೂರನೇ ಬಹುಮಾನವನ್ನು ಮುದ್ದಂಡ ರಾಯ್ ಪಡೆದುಕೊಂಡರು.

ಏರ್‌ಗನ್ ವಿಭಾಗದಲ್ಲಿ ಮೊದಲ ಬಹುಮಾನವನ್ನು ಸಿಜು, ಎರಡನೇ ಬಹುಮಾನವನ್ನು ಕನ್ನಿಕಂಡ ಶ್ಯಾಮ್, ಮೂರನೇ ಬಹುಮಾನವನ್ನು ಕೊಣಿಯಂಡ ಚಿನ್ನಪ್ಪರವರು ಪಡೆದುಕೊಂಡರು.