ನಾಪೋಕ್ಲು, ಅ. ೧೭: ಮನುಷ್ಯನನ್ನು ಮೃಗತ್ವದಿಂದ ಮಾನವತೆಯೆಡೆಗೆ, ಮಾನವತೆಯಿಂದ ದೈವತ್ವದೆಡೆಗೆ ಕರೆದೊಯ್ಯುವ ಶಕ್ತಿಯೇ ಧರ್ಮ ಎಂದು ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಭಿಪ್ರಾಯಪಟ್ಟರು.

ದೇವರಕೊಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ೪ನೇ ವರ್ಷದ ನವರಾತ್ರಿ ಉತ್ಸವದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಹಿಂದೂ ಧರ್ಮ ನಿರ್ದಿಷ್ಟ ದಿನಾಂಕದಿAದ, ನಿರ್ದಿಷ್ಟ ವ್ಯಕ್ತಿಗಳಿಂದ ಜನ್ಮ ತಳೆದಿಲ್ಲ. ಈ ಸೃಷ್ಟಿಯ ಜೊತೆಯಲ್ಲೇ ಉಗಮಗೊಂಡಿರುವ ಸನಾತನ ಧರ್ಮ, ಸೃಷ್ಟಿ ಇರುವವರೆಗೆ ಶಾಶ್ವತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿಂದೂ ಧರ್ಮ ತನ್ನ ಆಚರಣೆಗಳನ್ನು ಯಾರ ಮೇಲೂ ಬಲವಂತವಾಗಿ ಹೇರುವುದಿಲ್ಲ. ಆದರೂ ಕೆಲವರು ಸಾಮಾಜಿಕ ದೋಷಗಳನ್ನು ಹಿಂದೂ ಧರ್ಮದ ಮೇಲೆ ಆರೋಪಿಸುವ ಬಗ್ಗೆ ವಿಷಾದಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಬೆಳ್ಯನ ರಾಘವೇಂದ್ರ ಮಾತನಾಡಿ, ವೈದ್ಯರು, ಇಂಜಿನಿಯರರು ಸಹ ತಮ್ಮ ಕೆಲಸಗಳ ಯಶಸ್ಸಿಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಪ್ರಯತ್ನದೊಂದಿಗೆ ದೈವಬಲವನ್ನು ನಂಬಬೇಕು ಎಂದು ಕರೆ ನೀಡಿದರು.

ಮತ್ತೊಬ್ಬ ಅತಿಥಿ ವಕೀಲ ಪುಂಡರೀಕ ಮಾತನಾಡಿ, ನಾವು ಕೆಲಸ ಆರಂಭಿಸುವ ಮೊದಲು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತೇವೆ. ನಮ್ಮ ಪ್ರತಿಯೊಂದು ಕೆಲಸದಲ್ಲಿ ದೇವರ ನಂಬಿಕೆ ಹಾಸುಹೊಕ್ಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಹಾಗೂ ಯುವ ನಾಯಕ ಅಗೋಳಿಕಜೆ ಧನಂಜಯ ವಂದಿಸಿದರು.

ವೇದಿಕೆಯಲ್ಲಿ ಸಂಪಾಜೆ ಠಾಣಾಧಿಕಾರಿ ಸುಂದರ ಸುವರ್ಣ, ಜೋಡುಪಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಕೇವಳ, ಮಾಜಿ ಯೋಧ ಜೋಡುಪಾಲದ ಉಮೇಶ್ ಉಪಸ್ಥಿತರಿದ್ದರು.

ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಯಶೋಧರ ಸ್ವಾಗತಿಸಿದರು. ವಿಠಲ ಅವರು ಕಾರ್ಯಕ್ರಮ ನಿರೂಪಿಸಿ, ಧನಂಜಯ ವಂದಿಸಿದರು.