ಕುಶಾಲನಗರ, ಅ. ೧೭ : ಸಮಾಜದ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖದ್ದಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಡಾ .ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಶಾಲನಗರದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಡೆದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀ ಸ್ಮರಣೆ ಮತ್ತು ನವ ಜೀವನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರಾಜ್ಯ ಹಾಗೂ ದೇಶದ ಹಲವು ಕ್ಷೇತ್ರಗಳಲ್ಲಿ ಮಹಿಳಾ ಶಕ್ತಿ ಮಂಚೂಣಿಯಲ್ಲಿದೆ ಎಂದ ಅವರು, ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆ ಯಶಸ್ವಿ ಆಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕರಾದ ಆರ್ ವಿ ಗಂಗಾಧರಪ್ಪ ದುಶ್ಚಟಗಳ ಮೂಲಕ ಕುಟುಂಬ ಕಲಹ ಏರ್ಪಡುವುದರ ನಡುವೆ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಸಂದರ್ಭ ಕುಡಿತದ ದಾಸರಾಗಬಾರದು. ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕಾಗಿದೆ ಎಂದು ಕರೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿ ಇದುವರೆಗೆ ೧೮೭೦ ಮದ್ಯವರ್ಜನ ಶಿಬಿರಗಳಲ್ಲಿ ೧.೫ ಲಕ್ಷಕ್ಕೂ ಅಧಿಕ ಮಂದಿ ನವಜೀವನ ಸದಸ್ಯರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಅವರ ಕುಟುಂಬ ನೆಮ್ಮದಿಯ ಬದುಕು ಸಾಗಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕೊಡಗು ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ತಂಡದಲ್ಲಿ ಸುಮಾರು ೨೦೦ಕ್ಕೂ ಅಧಿಕ ಮಂದಿ ಅಗತ್ಯ ಸಮಯಗಳಲ್ಲಿ ನೆರವು ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಮಾತನಾಡಿ ಮಹಿಳೆಯರ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಕ್ಷೇತ್ರದ ಯೋಜನೆಗಳ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘ, ಸ್ವ ಸಹಾಯ ಸಂಘಗಳ ಫಲಾನುಭವಿ ಸದಸ್ಯರಿಗೆ ಅಗತ್ಯ ಅನುದಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಆರೋಗ್ಯ ರಕ್ಷಾ ನಿಧಿ ವಿತರಣೆ ಮಾಡಲಾಯಿತು.

ಇದು ಸಂದರ್ಭ ನವ ಜೀವನ ಸದಸ್ಯರು ತಮ್ಮ ಅನುಭವಗಳನ್ನು ಸಭೆಯಲ್ಲಿ ಹೇಳಿಕೊಂಡರು. ವೇದಿಕೆಯಲ್ಲಿ ಗಣ್ಯರು ನವಜೀವನ ಸದಸ್ಯರುಗಳನ್ನು ಹೂ ನೀಡುವ ಮೂಲಕ ಅಭಿನಂದಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಡಿಕೇರಿ, ಕುಶಾಲನಗರದ ಸದಸ್ಯರುಗಳು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜನಜಾಗೃತಿ ವೇದಿಕೆ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಶಾಸಕರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಕೊಡಗು ಜಿಲ್ಲಾ ಅಧ್ಯಕ್ಷ ಪಿ. ಅಭಿಮನ್ಯು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಎ.ಎಸ್. ಚಂದ್ರಮೋಹನ್, ವಿ.ಡಿ. ಪುಂಡರಿಕಾಕ್ಷ, ಕೆ.ಎಸ್. ರಾಜಶೇಖರ್, ಎಚ್.ಎಂ. ಚಂದ್ರು, ಹೊಸೂರು ಸುರೇಶ್, ಚಂದ್ರಪ್ರಕಾಶ್, ದೀರ್ಘಕೇಶಿ ಶಿವಣ್ಣ, ಅಯ್ಯಪ್ಪ, ಮತ್ತಿತರರು ಇದ್ದರು.

ಯೋಜನೆಯ ಸೋಮವಾರಪೇಟೆ ಯೋಜನಾಧಿಕಾರಿ ರೋಹಿತ್, ಮಡಿಕೇರಿಯ ಪುರುಷೋತ್ತಮ್, ಸೇವಾ ಪ್ರತಿನಿಧಿಗಳು ಸದಸ್ಯರುಗಳು ಪಾಲ್ಗೊಂಡಿದ್ದರು. ವಲಯ ಮೇಲ್ವಿಚಾರಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ಯೋಜನಾಧಿಕಾರಿ ರೋಹಿತ್ ಸ್ವಾಗತಿಸಿ , ವಲಯ ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿದರು.