ಮಡಿಕೇರಿ, ನ. ೨೯: ಕಲೆ, ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ವರ್ಷಕ್ಕೆ ಒಂದು ಬಾರಿ ಎಸ್.ಕೆ.ಎಸ್.ಎಸ್.ಎಫ್. ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಹಮ್ಮಿಕೊಂಡು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ.

ಎಸ್.ಕೆ.ಎಸ್.ಎಸ್.ಎಫ್. ಸಿದ್ದಾಪುರ ವಲಯ, ವೀರಾಜಪೇಟೆ ಹಾಗೂ ಕುಶಾಲನಗರ ವಲಯ ಮಟ್ಟದ ಕಲೋತ್ಸವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಡಿಸೆಂಬರ್ ೧ ರಂದು ಸಿದ್ದಾಪುರದಲ್ಲಿ ಜಿಲ್ಲಾಮಟ್ಟದ ಕಲೋತ್ಸವವು ನಡೆಯಲಿದ್ದು, ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್. ಮತ್ತು ಸರ್ಗಲಯ ಸಮಿತಿ ಎಲ್ಲಾ ರೀತಿಯ ಸಿದ್ಧತೆಯನ್ನು ಪೂರ್ಣಗೊಳಿಸಿದ್ದು, ಪ್ರತಿಭೆಗಳ ಸ್ವಾಗತಕ್ಕಾಗಿ ಸಿದ್ದಾಪುರ ಪಟ್ಟಣ ಸಜ್ಜುಗೊಂಡಿದೆ.

ಎಸ್.ಕೆ.ಎಸ್.ಎಸ್.ಎಫ್. ಕಲೋತ್ಸವದಲ್ಲಿ ಈ ಬಾರಿ ೨೫ ವರ್ಷದೊಳಗಿನ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜೂನಿಯರ್, ಸೀನಿಯರ್, ಸೂಪರ್ ಸೀನಿಯರ್, ಜನರಲ್ ಗ್ರೂಪ್, ತ್ವಲಬಾ ಜೂನಿಯರ್ ಹಾಗೂ ತ್ವಲಬಾ ಸೀನಿಯರ್ ವಿಭಾಗಗಳಲ್ಲಿ ೯೪ಕ್ಕೂ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಪ್ರಸ್ತುತ ವಿದ್ಯಮಾನಗಳು, ಕಲೆ ಸಾಹಿತ್ಯ, ರಾಜಕೀಯ ಘಟನೆಗಳು, ಭಾರತ ಇತಿಹಾಸ ಹೀಗೆ ಹಲವಾರು ವಿಷಯಗಳನ್ನೊಳಗೊಂಡ ವಿವಿಧ ಸ್ಪರ್ಧೆಗಳು ಇಸ್ಲಾಮಿಕ್ ಕಲೋತ್ಸವದಲ್ಲಿ ನಡೆಯಲಿವೆ. ಹಿಸ್ಟರಿ ಟಾಕ್, ಪ್ರಬಂಧ, ಹಾಡು, ಚಿತ್ರ ರಚನೆ, ಪೋಸ್ಟರ್ ಡಿಸೈನಿಂಗ್, ಕ್ವಿಝ್, ಕನ್ನಡ ಭಾಷಣ, ಪತ್ರಿಕಾ ವರದಿ ರಚನೆ, ಕವನ ರಚನೆ ಹಾಗೂ ವಾಚನ, ೯೪ ನಾನಾ ಸ್ಪರ್ಧೆಗಳು ಆಯೋಜನೆಗೊಳ್ಳಲಿದೆ.

ವಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ ಪ್ರತಿಭೆಗಳು, ಸಿದ್ದಾಪುರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸುವ ಸ್ಪರ್ಧಾಳುಗಳು ಡಿಸೆಂಬರ್ ೧೪ ಮತ್ತು ೧೫ ರಂದು ನಡೆಯಲಿರುವ ರಾಜ್ಯಮಟ್ಟದ ಎಸ್.ಕೆ.ಎಸ್.ಎಸ್.ಎಫ್. ಕಲೋತ್ಸವದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದೆ.

ಪ್ರತೀ ವಿಭಾಗಗಳಲ್ಲಿ ಸ್ಪರ್ಧಾಳುಗಳ ಮಧ್ಯೆ ಪೈಪೋಟಿ ಹಾಗೂ ಎಲ್ಲಾ ಪ್ರತಿಭೆಗಳು ಭಾಗವಹಿಸಬೇಕೆಂಬ ಉದ್ದೇಶದಿಂದ ವಿನೂತನವಾಗಿ ಎಸ್.ಕೆ.ಎಸ್.ಎಸ್.ಎಫ್. ಕಲೋತ್ಸವದಲ್ಲಿ ಪ್ರತೀ ವಿಭಾಗಗಳಲ್ಲಿ "ಫೆಸ್ಟ್ ಐಕಾನ್" ಹಾಗೂ ಕಲೋತ್ಸವದ ಕಲಾ ಪ್ರತಿಭೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅತೀ ಹೆಚ್ಚು ಅಂಕಗಳಿಸುವ ಪ್ರತೀ ವಿಭಾಗದ ಪ್ರತಿಭೆಯನ್ನು ಆಯಾ ವಿಭಾಗದ ಫೆಸ್ಟ್ ಐಕಾನ್ ಆಗಿ ಘೋಷಿಸಲಾಗುತ್ತದೆ. ಅದಲ್ಲದೇ ಕಲೋತ್ಸವದಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಪ್ರತಿಭೆಯನ್ನು ಕಲಾ ಪ್ರತಿಭೆ ಬಿರುದು ನೀಡಿ ಗೌರವಿಸಲಾಗುತ್ತದೆ.

-ಕೆ.ಎಂ ಇಸ್ಮಾಯಿಲ್ ಕಂಡಕರೆ