ಸೋಮವಾರಪೇಟೆ, ಫೆ. ೧೦: ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿ.ಟಿ.ಸಿ.ಜಿ. ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧಿಸಬೇಕಾದ ಗುರಿಯ ಬಗ್ಗೆ ಮಾತ್ರ ಕನಸ್ಸು ಕಾಣಬೇಕು. ಪ್ರತಿನಿತ್ಯ ಆ ಬಗ್ಗೆ ಮನನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ. ಕಳೆದ ಆರು ವರ್ಷಗಳಿಂದ ಎಸ್ಎಸ್ಎಲ್ಸಿಯಲ್ಲಿ ಸತತವಾಗಿ ಶೇ.೧೦೦ರಷ್ಟು ಫಲಿತಾಂಶ ಶಾಲೆಗೆ ಸಿಕ್ಕಿದೆ. ದ್ವಿತೀಯ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳು ಕಲಿಕೆಯ ಕಡೆ ಗಮನಹರಿಸಬೇಕು. ತಾವುಗಳು ಓದಿದ ಸಂಸ್ಥೆ ಮತ್ತು ಗುರು ಹಿರಿಯರಿಗೆ ಸದಾ ಗೌರವ ಕೊಡಬೇಕು ಎಂದು ಹೇಳಿದರು.
ವಿದ್ಯಾಸಂಸ್ಥೆಯ ಭಾತ್ಮೀದಾರರಾದ ಕೆ.ಎಂ.ಜಗದೀಶ್ ಮಾತನಾಡಿ, ಮುಂದಿನ ವ್ಯಾಸಂಗಕ್ಕೆ ನಗರದ ಕಾಲೇಜುಗಳಿಗೆ ಸೇರಿದ ಮೇಲೆ, ಸಭ್ಯ ವಿದ್ಯಾರ್ಥಿಗಳ ಸಹವಾಸ ಮಾಡಬೇಕು. ದುಶ್ಚಟಕ್ಕೆ ಬಲಿಯಾದ ವಿದ್ಯಾರ್ಥಿಗಳಿಂದ ದೂರವಿರಬೇಕು. ಪೋಷಕರು ಮಕ್ಕಳ ಮೇಲೆ ದೊಡ್ಡ ಕನಸ್ಸು ಕಟ್ಟಿರುತ್ತಾರೆ. ಅವರ ತ್ಯಾಗಕ್ಕೆ ಮಕ್ಕಳು ಪ್ರತಿಫಲ ತಂದು ಕೊಡಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಮಿಲ್ಡ್ರೆಡ್ ಗೋನ್ಸಾಲ್ವೆಸ್ ಮಾತನಾಡಿ, ವಿದ್ಯೆಯಿಂದಲೇ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕು. ನಿರಂತರ ಕಲಿಕೆಯಿಂದ ಅಸಾಧ್ಯ ಎಂಬುದನ್ನೂ ಸಾಧಿಸಬಹುದು. ವಿದ್ಯಾರ್ಥಿಗಳು ಕೆಟ್ಟ ಆಕರ್ಷಣೆಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಎಂದಿಗೂ ಒಳ್ಳೆಯದನ್ನೇ ಯೋಚಿಸಬೇಕು ಮತ್ತು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿ ಪುರಸ್ಕಾರವನ್ನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಇರ್ಮಾನ್ ಹಾಗೂ ವಾಣಿಜ್ಯ ವಿಭಾಗದ ಸೃಷ್ಟಿ ಪಡೆದುಕೊಂಡರು. ಕ್ರೀಡಾ ಕ್ಷೇತ್ರದ ಸಾಧಕರಾಗಿ ವಿಜ್ಞಾನ ವಿಭಾಗದ ಪುಷ್ಪಾಂಜಲಿ, ವಾಣಿಜ್ಯ ವಿಭಾಗದ ಕೀರ್ತನ್, ಅಮೂಲ್ಯ, ಖುಷಿ ಬಹುಮಾನ ಪಡೆದುಕೊಂಡರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ನಂದಕುಮಾರ್, ಶ್ರೀಹರಿ ಇದ್ದರು. ವಿದ್ಯಾರ್ಥಿನಿಯರಾದ ಮೋನಿಷಾ, ಶಿಫಾ, ಜೀವಿತ, ಭಾನುಪ್ರಿಯಾ, ಇಬ್ಬನಿ ಕಾರ್ಯಕ್ರಮ ನಿರ್ವಹಿಸಿದರು.