ಮಡಿಕೇರಿ, ಫೆ. ೧೧: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಕಾಯಕ ಶರಣರ ಜಯಂತಿ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ನಡೆಯಿತು.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕವಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕ ದಾಸೋಹ ವಚನಗಳಿಂದ ಹೆಸರುವಾಸಿಯಾಗಿರುವ ಕಾಯಕ ಶರಣರು ವಚನಗಳ ಮೂಲಕ ಬಹಳ ಸರಳವಾಗಿ ಕನ್ನಡ ಸಾಹಿತ್ಯದಲ್ಲಿ ಜನರಿಗೆ ಸಂದೇಶಗಳನ್ನು ತಿಳಿಸುತ್ತಿದ್ದವರು ಎಂದು ಹೇಳಿದರು.
ಕಾಯಕದಿಂದ ದೇವರನ್ನು ಪೂಜಿಸುವ ಬದಲಾಗಿ ಕಾಯಕವನ್ನು ಮಾಡುತ್ತಾ ದೇವರನ್ನು ಕಂಡವರು ಅಲ್ಲದೇ ಕಾಯಕಗಳಿಂದ ಯಾವುದೇ ಜಾತಿಯನ್ನು ಗುರುತಿಸಬಾರದು ಯಾವ ಕಾಯಕವು ದೊಡ್ಡದಲ್ಲ ಎಂದು ತಿಳಿಸಿಕೊಟ್ಟವರು ಕಾಯಕ ಶರಣರು ಎಂದರು.
ಹಾಗೆಯೇ ಯಾವುದೇ ಕೆಲಸವನ್ನು ಮಾಡಿದರು ಆ ಕೆಲಸದ ಮೇಲೆ ನಮಗೆ ಪ್ರೀತಿ ಇರಬೇಕು. ಪ್ರೀತಿ ಇದ್ದಾಗ ಮಾತ್ರ ನಾವು ಉತ್ತಮ ರೀತಿಯಲ್ಲಿ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಎಲ್ಲಾ ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ವ್ಯಕ್ತಿತ್ವವನ್ನು ಬೆಳೆಸುವಂತಹ ಪಾಠಗಳನ್ನು ಅವರಿಗೆ ತಿಳಿಸಿಕೊಡಬೇಕೆಂದು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕವಿತ ಹೇಳಿದರು.
ಇದೊಂದು ಶುಭ ಸಂದರ್ಭ. ಇಂತಹ ಸಂದರ್ಭದಲ್ಲಿ ಶರಣರ ಬಗ್ಗೆ ಮಾತನಾಡುವುದು, ಅವರ ಸದ್ವಿಚಾರಗಳು ಮಾತನಾಡಿದಷ್ಟು ಬರುತ್ತಲೇ ಇರುತ್ತದೆ ಎಂದರು. ಎಲ್ಲಾ ವಚನಕಾರರ ಉದ್ದೇಶಗಳು ಒಂದೇ ಆಗಿದ್ದವು. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಕೈಗೊಂಡAತಹ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಗಳು ಕೂಡ ಅಭೂತಪೂರ್ವವಾದದ್ದು. ಹಾಗೆಯೇ ಅವರ ಕಾಯಕನಿಷ್ಠೆ, ಆದರ್ಶ, ತತ್ವಗಳು, ನಡೆನುಡಿಗಳಲ್ಲೊಂದಾಗಿಸಿ ಕೈಗೊಂಡAತಹ ಕೆಲಸ ಕಾರ್ಯಗಳು ಇಂದು ಜಾಗತಿಕ ಮಟ್ಟದಲ್ಲಿ ಒಂದು ವಿಶ್ವ ಮಾನ್ಯತೆಯನ್ನು ಪಡೆದಿದೆ ಎಂದು ಸೋಮವಾರಪೇಟೆ ತಾಲೂಕಿನ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಲಜಾಕ್ಷಿ ತಿಳಿಸಿದರು.
ಜೆ.ಸಿ. ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಶಿಕ್ಷಕರುಗಳು ಮತ್ತಿತರರು ಇದ್ದರು.