ಅನಿಲ್ ಎಚ್.ಟಿ.

ಮಡಿಕೇರಿ, ಫೆ. ೧೩ : ಮರಗಳ ಕೆಳಗಡೆ ಬಿಳಿ ಶಿಲೆ ಕೆತ್ತನೆಯಲ್ಲಿ ತನ್ಮಯವಾಗಿರುವ ಶಿಲ್ಪಿಗಳು, ಹಸಿರ ಸಿರಿಯ ನಡುವೆ ರೂಪುಗೊಳ್ಳುತ್ತಿರುವ ವೈಶಿಷ್ಟಪೂರ್ಣ ಶಿಲಾಕೃತಿಗಳನ್ನು ಹೊಂದಿರುವ ಆಲಯ, ಅಲ್ಲಲ್ಲಿ ಕಂಡುಬರುವ ಅಮೂಲ್ಯ ಕಲ್ಲುಗಳು, ಭವ್ಯ ಕುಸುರಿ ಕೆತ್ತನೆಗಳು... ದೇವಾನುದೇವತೆಗಳ ಸುಂದರ ಶಿಲ್ಪಗಳು... ಇದು ಇನ್ನು ಕೆಲವೇ ತಿಂಗಳಲ್ಲಿ ಕೊಡಗಿನಲ್ಲಿ ಲೋಕಾರ್ಪಣೆಗೊಳ್ಳಲಿರುವ ದಕ್ಷಿಣ ಭಾರತದ ಅತೀ ದೊಡ್ಡದಾದ ಜೈನ ದೇವಾಲಯ ವ್ಯಾಪ್ತಿಯಲ್ಲಿ ಕಂಡುಬರುವ ದೃಶ್ಯ.

ಊಹೆಗೂ ನಿಲುಕದ ರೀತಿಯಲ್ಲಿ ಕೊಡಗಿನಲ್ಲಿ ಭವ್ಯ ಮತ್ತು ದಿವ್ಯವಾದ ಜೈನ ದೇವಾಲಯದ ಕಾರ್ಯ ಇದೀಗ ನಡೆಯುತ್ತಿದೆ. ದೇಶವ್ಯಾಪಿಯ ಜೈನಭಕ್ತರು ಕೊಡಗಿನ ಈ ದೇವಾಲಯ ವೀಕ್ಷಣೆಗೆ ಮುಂದಿನ ವರ್ಷಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡಲಿದ್ದಾರೆ. ದೇವಾಲಯ ಪೂರ್ಣಗೊಂಡ ಬಳಿಕ ಕೊಡಗು ಕೂಡ ಜೈನ ದೇವಾಲಯವಿರುವ ಜಿಲ್ಲೆಯಾಗಿ ಪ್ರಸಿದ್ದಿಗೊಳ್ಳಲಿದೆ ಮಾತ್ರವಲ್ಲ, ಕೊಡಗಿನ ಪ್ರವಾಸೀ ತಾಣಗಳ ಸಾಲಿಗೆ ಈ ಜೈನ ದೇವಾಲಯ ಕೂಡ ಸೇರ್ಪಡೆಯಾಗಲಿದೆ.

ಸುಂಟಿಕೊಪ್ಪದಿAದ ಮಾದಾ ಪುರಕ್ಕೆ ತೆರಳುವ ಮಾರ್ಗದಲ್ಲಿ ೬ ಕಿಲೋಮೀಟರ್ ಸಾಗಿದರೆ ಸಿಗುವ ಗುಂಡುಕುಟ್ಟಿ ಎಂಬ ಗ್ರಾಮದ ಸರ್ಕಾರಿ ಶಾಲೆಯ ಎದುರಿನಿಂದ ಸಾಗುವ ಒಳದಾರಿಯಲ್ಲಿ ೨ ಕಿಲೋಮೀಟರ್ ಸಾಗಿದರೆ ಎಡಬದಿಯಲ್ಲಿಯೇ ಜೈನ ದೇವಾಲಯ ನಿರ್ಮಾಣ ತಾಣ ಕಂಡು ಬರುತ್ತದೆ.

ಶ್ರೀ ಜೀರಾವಾಲ ಧಾಮ ಎಂಬ ಹೆಸರಿನ ಫಲಕದ ಬದಿಯಲ್ಲಿ ಸಾಗಿದರೆ ಅಲ್ಲಿಯೇ ಜೈನರಿಗೆ ಅತ್ಯಂತ ಪ್ರಮುಖರಾದ ಜೀನಾವಾಲರ ಆಲಯ ಕಂಡುಬರುತ್ತದೆ. ಪ್ರಾರಂಭದಲ್ಲಿ ೧೦೮ ಕೈಗಳನ್ನು ಹೊಂದಿರುವ ಶ್ರೀ ಪದ್ಮಾವತಿ ದೇವಿಯ ಭವ್ಯವಾದ ಕಪ್ಪುಶಿಲೆಯ ವಿಗ್ರಹ ಇದೆ. ಇಲ್ಲಿ ಪೂಜೆ ಸಲ್ಲಿಸಿ ಪಕ್ಕದಲ್ಲಿನ ಪುಟ್ಟ ದ್ವಾರದ ಮೂಲಕ ಒಳ ನುಗ್ಗಿದರೆ ಬಿಳಿಶಿಲೆಯಲ್ಲಿ ರೂಪುಗೊಂಡಿರುವ ಭಗವಾನ್ ಬುದ್ದನ ಪ್ರತಿಮೆ ಕಾಣಸಿಗುತ್ತದೆ. ಇಲ್ಲೆಲ್ಲೂ ಮಾತನಾಡುವಂತಿಲ್ಲ. ಮೌನಕ್ಕೆ ಆದ್ಯತೆ, ಮೌನದಿಂದಲೇ ಭಗವಾನ್ ನನ್ನು ಧ್ಯಾನಿಸಬೇಕು ಎಂಬ ನಿಯಮ ಇದೆ.

ಇಲ್ಲಿಂದ ಹೊರಬಂದು ಮೇಲಕ್ಕೆ ಏರುತ್ತಾ ಸಾಗಿದರೆ, ಅಲ್ಲಲ್ಲಿ ನಿಸರ್ಗದತ್ತವಾಗಿರುವ ಬೃಹತ್ ಕಲ್ಲುಗಳನ್ನೇ ಆಧಾರವಾಗಿ ಬಳಸಿ ಅದರ ಮೇಲೆ ಯಾತ್ರಿನಿವಾಸ, ಸ್ವಾಗತ ಕೊಠಡಿಗಳನ್ನು ನಿರ್ಮಿಸಲಾಗಿರುವು ದನ್ನು ಕಾಣಬಹುದು. ಇಲ್ಲಿಗೆ ಬರುವ ಯಾತ್ರಿಕರಿಗಾಗಿ ಈಗಾಗಲೇ ೧೨ ಕಾಟೇಜ್‌ಗಳು ಸಿದ್ಧಗೊಂಡಿವೆ.

ಏರುಹಾದಿಯಲ್ಲಿ ಹೆಜ್ಜೆ ಹಾಕಿದರೆ ಸುತ್ತಲಿನ ಕಾಫಿ ತೋಟಗಳ ನಡುವಿನ ವಿಶಾಲ ಪ್ರದೇಶದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಹಂತದಲ್ಲಿರುವುದು ಗೋಚರಿಸುತ್ತದೆ. ಈ ಕಟ್ಟಡದ ಸುತ್ತಲೂ ಅನೇಕ ಶಿಲ್ಪಿಗಳು ತನ್ಮಯರಾಗಿ ಕುಸುರಿ ಕೆಲಸದ ಮೂಲಕ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಶಿಲಾ ಕೆತ್ತನೆಯಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ.

ಇವರನ್ನು ದಾಟಿಕೊಂಡು ಮುಂದೆ ಸಾಗಿದಂತೆ ಅಲ್ಲಿ ಕಂಡುಬರುವುದೇ ಅತ್ಯದ್ಭುತವಾಗಿ ನಿರ್ಮಾಣವಾಗುತ್ತಿರುವ ಶ್ರೀ ಜೀರಾವಾಲ ಪಾರ್ಶ್ವನಾಥ ಅವರ ದೇವಾಲಯ. ಪದ್ಮಾಸನ ಭಂಗಿಯಲ್ಲಿರುವ ಶ್ರೀ ಜೀರಾವಾಲ ಪಾರ್ಶ್ವನಾಥ ಮೂರ್ತಿ, ಶ್ವೇತಾಂಭರರಾದ ಶ್ರೀ ಜೀರಾವಾಲರ ವಿಗ್ರಹಗಳು ಇಲ್ಲಿನ ವಿಶೇಷ. ಬೆಂಗಳೂರಿನ ಶ್ರೀ ಓಂ ಶಾಂತಿ ಚಾರಿಟೇಬಲ್ ಟ್ರಸ್ಟ್ ನ ನಯಚಂದಸಾಗರ್, ಡಾ. ಅಜಿಚಂದಸಾಗರ್ ನೇತೃತ್ವದಲ್ಲಿ ಜೀರಾವರ ಧಾಮದ ನಿರ್ಮಾಣ ಕಾರ್ಯ ಇದೀಗ ಸಾಗಿದೆ.

ಇದುವೇ ಜೈನರ ಪವಿತ್ರ ದೇವರಾದ ಶ್ರೀ ಜೀರಾವಾಲ ಮಂದಿರ. ಈ ಕಟ್ಟಡದ ಸುತ್ತಲೂ ರಾಜಸ್ತಾನದ ಜೈಪುರದಿಂದ, ಒರಿಸ್ಸಾದಿಂದ ತರಲಾದ ಅಮೂಲ್ಯವಾದ ನೂರಾರು ಶಿಲೆಗಳ ವೈಭವ ಕಾಣಬಹುದಾಗಿದೆ, ದೇವಾಲಯದ ಮುಖ್ಯ ಪ್ರವೇಶ ದ್ವಾರದ ನಂತರದ ಆವರಣದಲ್ಲಿ ೩ ಕಡೆಗಳಲ್ಲಿ ಜೈನರ ದೇವರಾದ ಪಾರ್ಶ್ವನಾಥ, ಪದ್ಮಾವತಿದೇವಿ, ಸರಸ್ವತಿ ದೇವಿಯರ ಮೂರ್ತಿಯನ್ನು ಎಡ ಮತ್ತು ಬಲಬದಿಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯದ ಗರ್ಭಗೃಹದಲ್ಲಿ ಮುಖ್ಯ ದೇವರಾಗಿ ಶ್ರೀ ಜೀರಾವಾಲರ ಪ್ರತಿಮೆಯನ್ನು ಪ್ರತಿಷ್ಟಾಪಿಸಲಾಗುತ್ತದೆ.

ದೇವಾಲಯ ನಿರ್ಮಾಣಕ್ಕೂ ಮುನ್ನ ಜೈನ ಧರ್ಮದ ಪ್ರಮುಖರು, ವಾಸ್ತುಶಿಲ್ಪಿಗಳು ಕರ್ನಾಟಕದ ಸೋಮನಾಥ, ಬೇಲೂರು, ಹಳೇಬೀಡುಗಳಿಗೆ ತೆರಳಿ ಅಲ್ಲಿನ ವಾಸ್ತುವೈಭವ ಗಮನಿಸಿ ಅದೇ ಮಾದರಿಯಲ್ಲಿ ಶ್ರೀ ಜೇರಾವಾಲ ಧಾಮದ ಮಂದಿರವನ್ನು ರೂಪಿಸುತ್ತಿದ್ದಾರೆ.

ಇಲ್ಲಿ ಮುಂದಿನ ದಿನಗಳಲ್ಲಿ ಪ್ರತಿಷ್ಟಾಪಿಸಲಾಗುವ ಶ್ರೀ ಪದ್ಮಾವತಿ ಮಾತೆಯ ವಿಗ್ರಹ ೮ ಅಡಿ ಎತ್ತರವಿದ್ದು, ೧೦೮ ಕೈಗಳನ್ನು ಹೊಂದಿದ್ದು ತನ್ನ ಭವ್ಯತೆಯ ಮೂಲಕ ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪದ್ಮಾವತಿ ದೇವರ ವಿಗ್ರಹ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಈಗಾಗಲೇ ಪ್ರವೇಶದಲ್ಲಿರುವ ಸಾವಿರಾರು ಕಿಲೋ ತೂಕದ ಈ ವಿಗ್ರಹವನ್ನು ಲಾರಿಯಿಂದ ಇಳಿಸಿ ೫೦ ಮೀಟರ್ ತರಲು ೩ ಗಂಟೆಗಳ ಸಮಯ ತಗುಲಿದೆ.

ಈ ಜೀರಾವಾಲ ಧಾಮದ ನಿರ್ಮಾಣ ಕಾರ್ಯ ಕಳೆದ ೩ ವರ್ಷಗಳಿಂದ ಸಾಗಿದೆ. ೨೦೨೦ರ ಮಾರ್ಚ್ ೩೦ ರಂದು ಭೂಮಿಪೂಜೆ ನೆರವೇರಿತ್ತಾದರೂ ಅದಾಗಿ ಕೆಲವೇ ದಿನಗಳಲ್ಲಿ ಕೋವಿಡ್ ಲಾಕ್ ಡೌನ್ ಉಂಟಾದ ಹಿನ್ನಲೆಯಲ್ಲಿ ೨ ವರ್ಷಗಳ ಕಾಲ ನಿರೀಕ್ಷೆಯಂತೆ ಕೆಲಸಗಳು ನಡೆಯಿಲ್ಲ. ಇದೀಗ ಮೂರು ವರ್ಷಗಳಿಂದ ಬಿರುಸಿನಿಂದ ಇಲ್ಲಿ ದೇವಾಲಯ ನಿರ್ಮಾಣ ಕಾರ್ಯ ಸಾಗಿದ್ದು, ಒರಿಸ್ಸಾದಿಂದ ಬಂದಿರುವ ೪೨ ನುರಿತ ಶಿಲ್ಪಿಗಳು ದಿನವಿಡೀ ವೈವಿಧ್ಯಮಯ ಶಿಲ್ಪಗಳ ಕೆತ್ತನೆಯಲ್ಲಿ ಅದರಲ್ಲಿಯೂ ಅತ್ಯಂತ ಸೂಕ್ಷö್ಯ ರೀತಿಯ ಶಿಲ್ಪಕುಸುರಿ ಕೆತ್ತನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಆನೆ, ಸಿಂಹ ಕುದುರೆ, ಜಿಂಕೆ, ನವಿಲು, ಮೊಲ, ಗುಬ್ಬಚ್ಚಿ ಮೊದಲಾದ ವನ್ಯ ಜೀವಿಗಳ ಪುಟ್ಟ ಕೆತ್ತನೆಗಳ ಸಹಿತ ಬೃಹತ್ ಶಿಲಾ ಕೆತ್ತನೆಗಳಲ್ಲಿಯೂ ಶಿಲ್ಪಿಗಳು ತೊಡಗಿಸಿಕೊಂಡಿದ್ದಾರೆ.

ಅAದಾಜು ರೂ. ೫೦ ಕೋಟಿ ವೆಚ್ಚದಲ್ಲಿ ಜೀರಾವಾಲ ಧಾಮ ನಿರ್ಮಾಣವಾಗುತ್ತಿದ್ದು, ಯಾತ್ರಿನಿವಾಸ, ಭೋಜನಶಾಲಾ, ವಿವಿಧ ದೇವ ಮಂದಿರಗಳು, ಸ್ವಾಗತಕೋಣೆ, ಪ್ರವೇಶ ದ್ವಾರಗಳನ್ನು ಈ ಧಾಮ ಒಳಗೊಂಡಿದೆ. ಕಾಡು ಕಲ್ಲುಗಳನ್ನೇ ಸಹಜ ಸ್ಥಿತಿಯಲ್ಲಿ ಧಾಮಕ್ಕೆ ಬಳಕೆ ಮಾಡಲಾಗಿದೆ. ಇನ್ನೂ ನಿರ್ಮಾಣವಾಗಬೇಕಾಗಿರುವ ಧಾಮದ ಪ್ರವೇಶ ದ್ವಾರಕ್ಕೆ ೨.೫೧ ಕೋಟಿ ರಾಮಮಂದಿರದ ಮುಖ್ಯ ಪ್ರಾಂಗಣಕ್ಕೆ ೧.೫೧ ಕೋಟಿ ರೂ.ಗಳ ಅಂದಾಜು ವೆಚ್ಚ ತಗುಲಲಿದೆ.

ಇಷ್ಟಕ್ಕೂ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಇಂಥದ್ದೊAದು ಭವ್ಯ ಜೈನ ದೇವಾಲಯ ನಿರ್ಮಾಣ ಆಗುತ್ತಿರುವುದುದಾದರೂ ಯಾಕೆ?

ಈ ಧಾಮದಲ್ಲಿ ಮಾತಿಗೆ ಸಿಕ್ಕಿದ ಇಲ್ಲಿನ ಅರ್ಚಕ ಬೆಂಗಳೂರು ಮೂಲದ ಭಾವೇಷ್ ಈ ಬಗ್ಗೆ ಮಾಹಿತಿ ನೀಡಿದರು. ಇಲ್ಲಿರುವ ಅಂಜನಗೇರಿ ಬೆಟ್ಟಕ್ಕೆ ೧ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ಬೆಟ್ಟದಲ್ಲಿ ಪೂರ್ವಕಾಲದಿಂದಲೂ ಅನೇಕ ಜೈನವಿಗ್ರಹಗಳು ಕಂಡುಬAದಿದ್ದವAತೆ. ಅನೇಕ ಜೈನ ಬಸದಿಗಳು ಕೂಡ ಈ ವ್ಯಾಪ್ತಿಯಲ್ಲಿ ಇದ್ದವು. ಆದರೆ ಕಾಲಾಂತರಗಳಿAದ ಜೈನದೇವಾಲಯ, ಜೈನಮೂರ್ತಿಗಳು ನಾಶವಾಗಿದ್ದವು. ಹೀಗಾಗಿ ಅಂಜನಗೇರಿ ಬೆಟ್ಟದ ವ್ಯಾಪ್ತಿಯಲ್ಲಿ ಜೈನ ಮೂಲಕ್ಕೆ ಮತ್ತೆ ಕಾಯಕಲ್ಪ ನೀಡುವ ಉದ್ದೇಶದಿಂದ ಇಲ್ಲಿ ಜೈನ ಧಾಮ ಸ್ಥಾಪಿಸಿ ದೇಶವ್ಯಾಪ್ತಿಯಿಂದ ಜೈನರು, ಜೈನ ಪಂಥದ ಅನುಯಾಯಿಗಳು, ಪ್ರವಾಸಿಗರು ಇಲ್ಲಿಗೆ ಬರುವಂತೆ ಆಗಬೇಕೆಂಬ ಉದ್ದೇಶವಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಯಾವುದೇ ಪ್ರವಾಸೀ ತಾಣಗಳಿಲ್ಲ. ಮುಂದಿನ ದಿನಗಳಲ್ಲಿ ಸಹಸ್ತ ಸಂಖ್ಯೆಯಲ್ಲಿ ಬರಲಿರುವ ಜೈನಯಾತ್ರಿಕರಿಂದಾಗಿ ಸುಂಟಿಕೊಪ್ಪ ಮತ್ತು ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೂ ಮಹತ್ವದ ಕೊಡುಗೆ ದೊರಕಿದಂತಾಗುತ್ತದೆ.

ಶ್ರೀ ಜೀರಾವಾಲ ಹೆಸರಿನ ಜೈನ ದೇವರು, ರಾಜಾಸ್ತಾನದ ಗ್ರಾಮವೊಂದರಲ್ಲಿ ನೆಲದಲ್ಲಿ ದೊರಕಿದ ಶಿಲಾದೇವರಾಗಿದ್ದು ಇಂದಿಗೂ ರಹಸ್ಯ ಸ್ಥಳದಲ್ಲಿ ಈ ಜೀರಾವಾಲರ ವಿಗ್ರಹ ಸಂರಕ್ಷಿಸಲಾಗಿದೆ.ಕೊಡಗಿನಲ್ಲಿ ಮಂದಿರ ಪೂರ್ಣಗೊಂಡ ಮೇಲೆ ಅತ್ಯಂತ ವೈಭವದಿಂದ ಮೆರವಣಿಗೆ ಮೂಲಕ ಮೂಲ ವಿಗ್ರಹವನ್ನು ಸಾವಿರಾರು ಕಿ.ಮೀ. ದೂರದಿಂದ ಜೀರಾವಾಲ ಕೊಡಗು ಧಾಮಕ್ಕೆ ತರಲಾಗುತ್ತದೆ. ಪ್ರಸ್ತುತ ೪.೫೦ ಎಕ್ರೆ ಜಾಗದಲ್ಲಿ ಈ ಧಾಮ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಕ್ಕಪಕ್ಕದಲ್ಲಿ ಜಾಗ ದೊರತರೆ ಸುಸಜ್ಜಿತ ಗೋಶಾಲೆ ನಿರ್ಮಾಣದ ಉದ್ದೇಶ ಕೂಡ ಇದೆ ಎಂದ ಭಾವೇಶ್ ತಿಳಿಸಿದರು. ಧಾಮ ಉದ್ದೇಶಿತ ರೀತಿಯಲ್ಲಿ ನಿರ್ಮಾಣವಾಗಬೇಕಾದರೆ ಕನಿಷ್ಟ ೨ ವರ್ಷಗಳಾದರೂ ಬೇಕು ಎಂದು ಭಾವೇಶ್ ಮಾಹಿತಿ ನೀಡಿದರು.

ಕಳೆದ ವರ್ಷ ೪೬ ಸಾವಿರ ಸಂದರ್ಶಕರು ನಿರ್ಮಾಣ ಹಂತದಲ್ಲಿರುವ ಜೈನ ಮಂದಿರ ವೀಕ್ಷಣೆಗಾಗಿಯೇ ದೇಶದಾದ್ಯಂತಲಿನಿAದ ಬಂದಿದ್ದರು. ಹೀಗೆ ಬಂದವರಿಗೆ ಇಲ್ಲಿನ ಬೋಜನಶಾಲೆಯಲ್ಲಿ ಪ್ರಸಾದ ನೀಡಲಾಗುತ್ತದೆ. ಪ್ರತಿನಿತ್ಯವೂ ಜೈನ ಭಕ್ತರು ಈ ಧಾಮಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಬೆಳಗ್ಗೆ ೭ ಗಂಟೆಯಿAದ ಸಂಜೆ ೭ ಗಂಟೆಯವರೆಗೂ ಶ್ರೀ ಜೀರಾವಾಲ ಧಾಮ ಸಂದರ್ಶಕರಿಗಾಗಿ ತೆರೆದಿರುತ್ತದೆ. ಹೀಗೆ ಬರುವ ಸಂದರ್ಶಕರು ಜೋರಾಗಿ ಮಾತನಾಡುವಂತಿಲ್ಲ. ಮೌನಕ್ಕೇ ಪ್ರಾಧಾನ್ಯತೆ ಮತ್ತು ಕ್ಯಾಮರ, ಫೋಟೋ ತೆಗೆಯುವಂತಿಲ್ಲ ಎಂಬ ನಿರ್ಭಂಧವನ್ನೂ ಸಂದರ್ಶಕರಿಗೆ ವಿಧಿಸಲಾಗಿದೆ.

ಹೀಗೆ ಮಾಹಿತಿ ನೀಡಿದ ಸ್ವಯಂಸೇವಕರಾಗಿ ರಜಾದಿನಗಳಲ್ಲಿ ಮತ್ತು ಶನಿವಾರ ಭಾನುವಾರ ಇಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಉದ್ಯಮಿ ಭಾವೇಶ್, ಶ್ರೀ ಜೀರಾವಾಲ ಧಾಮ ಇಲ್ಲಿ ನಿರ್ಮಾಣವಾಗಿ ದೇಶವಿದೇಶಗಳ ಸಂದರ್ಶಕರನ್ನು ಆಕರ್ಷಿಸಬೇಕೆಂದು ಸಂಕಲ್ಪ ತೊಟ್ಟಿದ್ದಾರೆ. ಕಳೆದ ೧೭ ವರ್ಷಗಳಿಂದ ೪೮ ಗಂಟೆಗಳಿಗೊಮ್ಮೆ ಅಂದರೆ ೨ ದಿನಗಳಿಗೊಮ್ಮೆ ಕೇವಲ ಎಣ್ಣೆರಹಿತ ಚಪಾತಿ, ಧಾಲ್‌ಅನ್ನು ಒಂದು ಹೊತ್ತು ಮಾತ್ರ ತಿನ್ನುತ್ತಾ ಉಳಿದಂತೆ ಎರಡು ಹೊತ್ತು ನೀರು ಕುಡಿದು ಜೀವಿಸುತ್ತಿರುವ ಭಾವೇಶ್ ಯಾವಾಗ ಇಲ್ಲಿ ಧಾಮ ಲೋಕಾರ್ಪಣೆಯಾಗುತ್ತದೆಯೋ ಅಂದೇ ಕಬ್ಬಿನ ಹಾಲು ಸೇವನೆ ಮಾಡಿ ತಮ್ಮ ವಿಶಿಷ್ಟ ಆಹಾರಸೇವನೆಗೆ ವಿರಾಮ ಹೇಳುತ್ತಾರಂತೆ. ಈ ರೀತಿ ಎರಡು ದಿನಗಳಿಗೊಮ್ಮೆ ಒಂದು ಹೊತ್ತು ಮಾತ್ರ ಅಲ್ಪ ಆಹಾರ ಸೇವನೆ ಮಾಡುವ ಮೂಲಕ ತಾನು ಮತ್ತಷ್ಟು ಲವಲವಿಕೆಯಿಂದ, ಉತ್ಸಾಹದಿಂದ ಇರುವುದಾಗಿ ಬಾವೇಶ್ ಹೇಳಿದರು!

ಶ್ರೀ ಜೀರಾವಾಲ ಧಾಮದ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ದೊಡ್ಡ ಪ್ರಚಾರವೇ ಕಂಡುಬAದಿದೆ. ಕೊಡಗಿಗೆ ಬಂದಾಗ ಶುದ್ದ ಜೈನ ಆಹಾರಕ್ಕಾಗಿ ಜೈನಸಂದರ್ಶಕರು ಶ್ರೀ ಜೀರಾವಾಲ ಧಾಮಕ್ಕೆ ಭೇಟಿ ನೀಡಿ ಎಂಬ ಪ್ರಚಾರವೂ ನಡೆದಿದೆ.

ಕೊಡಗಿನ ಸುಂಟಿಕೊಪ್ಪ ಬಳಿಯಲ್ಲಿ ಜಾದೂ ರೀತಿ ಅತ್ಯದ್ಬುತವಾಗಿ ನಿರ್ಮಾಣವಾಗುತ್ತಿರುವ ಜೈನ ಧಾಮ ಸಂಪೂರ್ಣವಾದ ಮೇಲೆ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಯಾಗುವುದು ಖಂಡಿತಾ.

ಚಿತ್ರಗಳು : ಲಕ್ಷಿö್ಮÃಶ್