ಮಡಿಕೇರಿ, ಮಾ. ೨೭: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಲ್ಲಾ ಆಸ್ಪತ್ರೆ) ಸದ್ಯದಲ್ಲಿಯೇ ಹೃದ್ರೋಗ ಚಿಕಿತ್ಸೆ ಲಭ್ಯವಾಗಲಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾಹಿತಿ ನೀಡಿದ್ದಾರೆ.

ಕಾಲೇಜು ಸ್ಥಾಪನೆಯಾಗಿ ೧೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ "ಅವೆನ್ಸಿಸ್ ೨೦೨೫" ಎಂಬ ಬೃಹತ್ ಅರೋಗ್ಯ ಪ್ರದರ್ಶನ ಮೇಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕೊಡಗು ಜಿಲ್ಲಾ ಆಸ್ಪತ್ರೆಯನ್ನು ಅತ್ಯಂತ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸರಕಾರ ಬದ್ದವಾಗಿದ್ದು ಪ್ರಸ್ತುತ ಹೃದ್ರೋಗ ಚಿಕಿತ್ಸೆ ಕೇಂದ್ರ ಸ್ಥಾಪನೆಗೆ ಸರ್ಕಾರ ಒಪ್ಪಿದೆ ಎಂದು ತಿಳಿಸಿದರು.

ಮೆಡಿಕಲ್ ವಿದ್ಯಾರ್ಥಿಗಳ ಕಲಿಕೆಗೆ ಆರೋಗ್ಯ ಪ್ರದರ್ಶನ ಮೇಳ ಅತ್ಯಂತ ಅಗತ್ಯ ಕಾರ್ಯಕ್ರಮವಾಗಿದ್ದು ಸಾರ್ವಜನಿಕರು ಕೂಡ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಲೋಕೇಶ್ ಮಾತನಾಡಿ, ಇದು ಕೇವಲ ಜಾಗೃತಿ ಕಾರ್ಯಕ್ರಮವಲ್ಲ. ಯುವ ಜನಾಂಗಕ್ಕೆ, ಸಾರ್ವಜನಿಕರಿಗೆ ವೈದ್ಯಕೀಯ ಶಿಕ್ಷಣದ ಬಗ್ಗೆ ಅರಿವು ಮೂಡಿಸುವುದು ಹಾಗೂ ಮಾಹಿತಿ ನೀಡುವುದಾಗಿದೆ. ಮೊದಲ ದಿನದ ವೈದ್ಯಕೀಯ ಪ್ರದರ್ಶನ ಯಶಸ್ವಿಯಾಗಿದ್ದು, ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ತೆನ್ನಿರ ಮೈನಾ ಮಾತನಾಡಿ, ಜನರ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದ ಮೆಡಿಕಲ್ ಕಾಲೇಜಿನ ಆಡಳಿತ ವರ್ಗ,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿದರು.

(ಮೊದಲ ಪುಟದಿಂದ) ಮೆಡಿಕಲ್ ಕಾಲೇಜ್ ಸ್ಥಾಪನೆಯಾಗಿ ಹತ್ತು ವರ್ಷ ತುಂಬಿದ್ದರೂ ಡಾ ಮಂತರ್ ಗೌಡ ರವರು ಶಾಸಕರಾಗಿ ಆಯ್ಕೆಗೊಂಡ ನಂತರ ಆಸ್ಪತ್ರೆಯಲ್ಲಿ ಅಮೂಲಾಗ್ರ ಅಭಿವೃದ್ಧಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್.ಒ.ಡಿ ಡಾ ಪುರುಷೋತ್ತಮ ಮಾತನಾಡಿ, ಮೆಡಿಕಲ್ ಕಾಲೇಜಿನ ವಿಚಾರದಲ್ಲಿ ಶಾಸಕ ಡಾ. ಮಂತರ್ ಗೌಡ ರವರು ಸಂಪೂರ್ಣ ನೆರವು ನೀಡುತ್ತಿದ್ದು ಅದಕ್ಕೆ ಸಂಸ್ಥೆ ಅಭಾರಿಯಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯ ಮುಖ್ಯಸ್ಥರಾದ ಡಾ. ವಿಶಾಲ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್.ಎ.ಹಂಸ, ಡಾ. ಸೋಮಶೇಖರ್, ಡಾ. ಮಂಜುನಾಥ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರೋಹಿಣಿ, ನಗರಸಭಾ ಮಾಜಿ ಸದಸ್ಯ ಕೆ.ಜಿ. ಪೀಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.