ಕುಶಾಲನಗರ, ಮಾ. ೨೮: ಹಾರಂಗಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ, ತಡೆಗೋಡೆ ನಿರ್ಮಾಣ ಹಾಗೂ ಹೂಳೆತ್ತುವ ಬಹುಕೋಟಿ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಂದಾಜು ೧೩೧ ಕೋಟಿ ರೂಗಳ ಅನುದಾನದಲ್ಲಿ ನಡೆಯುತ್ತಿರುವ ಬೃಹತ್ ಯೋಜನೆ ೨೦೨೨ ರಿಂದ ಆರಂಭಗೊAಡಿದ್ದು ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಲಾಶಯದ ಹಿನ್ನೀರು ವ್ಯಾಪ್ತಿಯ ಹಟ್ಟಿಹೊಳೆ, ಮಾದಾಪುರ, ಗರಗಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನದಿಗೆ ಅತ್ಯಾಧುನಿಕ ತಂತ್ರಜ್ಞಾನವಾದ ಗೇಬಿಯನ್ ವಾಲ್ ನಿರ್ಮಾಣ, ಕೆಲವೆಡೆ ತಡೆಗೋಡೆ ನಿರ್ಮಾಣ, ಸಂಪರ್ಕ ಸೇತುವೆಗಳು ಪಾದಚಾರಿ ಸೇತುವೆಗಳ ನಿರ್ಮಾಣದೊಂದಿಗೆ ನದಿಯಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸುವ ಕಾಮಗಾರಿ ನಡೆಯಬೇಕಾಗಿದ್ದು ಹಲವು ಕಾರಣಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಹಾರಂಗಿ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಕಾಮಗಾರಿಗೆ ಸಂಬAಧಿಸಿದ ಪ್ರಗತಿ ಬಗ್ಗೆ ಶಾಸಕರು ಚರ್ಚೆ ನಡೆಸಿದರು.

ಕಾಮಗಾರಿ ೨೦೨೨ ಸೆಪ್ಟೆಂಬರ್ ತಿಂಗಳಿAದ ಆರಂಭಗೊAಡಿದ್ದು ಈ ವರ್ಷದ ಸೆಪ್ಟೆಂಬರ್ ತಿಂಗಳ ಪ್ರಾರಂಭದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗುತ್ತದೆ. ಒಪ್ಪಂದದ ಪ್ರಕಾರ ಇನ್ನು ಕೆಲವೇ ತಿಂಗಳುಗಳು ಇದ್ದು, ಇನ್ನು ಕೂಡ ನದಿ ವ್ಯಾಪ್ತಿಯ ಗಡಿ ಗುರುತು ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ.

ಕಾಮಗಾರಿ ನಡೆಸುವ ಸಂದರ್ಭ ಅಡ್ಡಿಯಾಗುವ ಸುಮಾರು ೬೦೦ ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಇನ್ನೂ ಅನುಮತಿ ದೊರೆತಿಲ್ಲ. ಸಂಬAಧಿಸಿದ ಗುತ್ತಿಗೆದಾರರು ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು ಈ ಬಗ್ಗೆ ಶಾಸಕರು ಗುತ್ತಿಗೆದಾರರನ್ನು ಮತ್ತು ನೀರಾವರಿ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರ ನಿರ್ಲಕ್ಷದಿಂದ ಯೋಜನೆಯ ಕಾಮಗಾರಿ ವಿಳಂಬಗೊಳ್ಳುತ್ತಿದೆ ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಘುಪತಿ ಅವರು ಶಾಸಕರ ಗಮನಕ್ಕೆ ತಂದರು.

ಪ್ರಸಕ್ತ ಕಾಮಗಾರಿಯ ಪ್ರಗತಿಯ ಬಗ್ಗೆ ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ವಿವರ ಒದಗಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಕಂದಾಯ ಅಧಿಕಾರಿಗಳಿಗೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಶಾಸಕರು ಸೂಚಿಸಿದರು.

೧೫ ದಿನಗಳ ಒಳಗಾಗಿ ನದಿ ಗಡಿ ಗುರುತು, ಅರಣ್ಯ ಇಲಾಖೆಯಿಂದ ಮರ ತೆರವುಗೊಳಿಸುವ ಬಗ್ಗೆ ಅನುಮತಿ ಮತ್ತು ಇತರ ಅಗತ್ಯವಿರುವ ಕೆಲಸಗಳನ್ನು ಮಾಡುವಂತೆ ಸೂಚನೆ ನೀಡಿದರು.

ಕಾಮಗಾರಿ ಸಂದರ್ಭ ಅಗತ್ಯವಿರುವ ಮರಗಳ ತೆರವು ಮಾತ್ರ ಮಾಡುವಂತೆ ಶಾಸಕ ಮಂತರ್ ಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇದೇ ಸಂದರ್ಭ ಸಭೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರದಲ್ಲಿ ನದಿಗೆ ಅಡ್ಡಲಾಗಿ ಸುಮಾರು ಏಳು ಕೋಟಿ ವೆಚ್ಚದ ತೂಗು ಸೇತುವೆ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಬಯಸಿದರು. ಸದ್ಯದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಗೊಳ್ಳುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಮೀಸಲು ಅರಣ್ಯದಲ್ಲಿ ವನ್ಯಜೀವಿಗಳಿಗೆ ಅಗತ್ಯವಿರುವ ಮೂಲಭೂತ ವ್ಯವಸ್ಥೆ ನೀರು ಮತ್ತು ಅಗತ್ಯ ಆಹಾರ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ತಿಳಿಸಿದ ಶಾಸಕರು ಸದ್ಯದಲ್ಲಿಯೇ ಸಂಬAಧಿಸಿದ ಅಧಿಕಾರಿಗಳೊಂದಿಗೆ ಮೀಸಲು ಅರಣ್ಯದ ಕೆರೆಗಳ ವೀಕ್ಷಣೆಗೆ ಕಾರ್ಯಕ್ರಮ ಹಾಕಿಕೊಳ್ಳುವುದಾಗಿ ಹೇಳಿದರು.

ಈ ಸಂದರ್ಭ ಮಡಿಕೇರಿ ವಿಭಾಗ ಅರಣ್ಯ ಉಪ ಸಂರಕ್ಷಣಾಧಿಕಾರಿ ಭಾಸ್ಕರ್, ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಮಡಿಕೇರಿಯ ಕಂದಾಯ ಅಧಿಕಾರಿಗಳು, ನೀರಾವರಿ ನಿಗಮದ ಅಧಿಕಾರಿಗಳು, ಸರ್ವೆ ಇಲಾಖೆ ಅಧಿಕಾರಿಗಳು, ಭೂವಿಜ್ಞಾನ ಗಣಿ ಇಲಾಖೆ ಅಧಿಕಾರಿಗಳು, ಮತ್ತಿತರರು ಇದ್ದರು.