ಮಡಿಕೇರಿ, ಏ. ೧೨: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಭಾಗಮಂಡಲ ನಾಡ್‌ಗೌಡ ಸಮಾಜ, ಕರಿಕೆ ಗೌಡ ಸಮಾಜ, ಚೇರಂಬಾಣೆ ಗೌಡ ಸಮಾಜ, ಭಾಗಮಂಡಲ ನಾಡ್‌ಗೌಡ ಯುವ ಒಕ್ಕೂಟ ಮತ್ತು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮ ತಾ. ೧೫ ರಂದು ಬೆಳಿಗ್ಗೆ ೯ ಗಂಟೆಯಿAದ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ೨೦೧೧ರಲ್ಲಿ ಸ್ಥಾಪನೆಗೊಂಡು ಕಳೆದ ೧೪ ವರುಷಗಳಿಂದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪೋಷಿಸಿ ಬೆಳೆಸುವ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅಕಾಡೆಮಿಯ ವತಿಯಿಂದ ಅರೆಭಾಷೆ ಸಾಹಿತ್ಯದ ಸುಮಾರು ೭೦ಕ್ಕೂ ಹೆಚ್ಚು ಪುಸ್ತಕಗಳ ಪ್ರಕಟಣೆ ಯನ್ನು ಇಲ್ಲಿಯವರೆಗೆ ಮಾಡಿದೆ. ಸಾಂಸ್ಕೃತಿಕವಾಗಿ ಭಾಷೆಯನ್ನು ಬಳಸಿಕೊಂಡು ಹಲವಾರು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲದೆ, ಮೈಸೂರು, ಬೆಂಗಳೂರು ಮತ್ತು ಹೊರ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಹೊರಗೆ ಕೂಡಾ ಹಲವಾರು ಕಾರ್ಯಕ್ರಮ ಏರ್ಪಡಿಸಿದೆ ಎಂದು ತಿಳಿಸಿದರು.

ಪ್ರತೀ ವರ್ಷ ಅರೆಭಾಷೆ ಮಾತನಾಡುವವರ ಸಾಧನೆ ಗುರುತಿಸಿ ಅರೆಭಾಷೆ ಗೌರವ ಪ್ರಶಸ್ತಿಯನ್ನು ಅರ್ಹರಿಗೆ ಕೊಡಮಾಡುತ್ತಾ ಬಂದಿದೆ. ಅರೆಭಾಷೆಯ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದೆ. ಅರೆಭಾಷೆ ನಿಘಂಟು ಮತ್ತು ಪದಕೋಶವನ್ನು ಬಿಡುಗಡೆ ಮಾಡಿರುತ್ತದೆ. ಸುಳ್ಯ ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ ಅರೆಭಾಷೆ ಸಂಘ ಸ್ಥಾಪಿಸಿ ಮಕ್ಕಳಲ್ಲಿ ಭಾಷೆ ಮತ್ತು ಸಂಸ್ಕೃತಿಯ ಅರಿವನ್ನು ಮೂಡಿಸುವ ಮತ್ತು ಪ್ರಚಾರಪಡಿಸುವ ಕಾರ್ಯ ಮಾಡುತ್ತಿದೆ. ಇವುಗಳಷ್ಟೇ ಅಲ್ಲದೆ ಇನ್ನೂ ಹಲವಾರು ಕಾರ್ಯ ನಿರ್ವಹಿಸಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತಿದೆ ಎಂದು ಅಧ್ಯಕ್ಷರು ವಿವರಿಸಿದರು.

ಅರೆಭಾಷೆ ಅಕಾಡೆಮಿ ಸ್ಥಾಪನೆಯ ದಶ ವರ್ಷದ ಸಂಭ್ರಮಾಚರಣೆಯ ನೆನಪಿಗಾಗಿ ರಾಜ್ಯದ ಅರೆಭಾಷಿಕರ ಗಡಿ ಪ್ರದೇಶದಲ್ಲಿ ೨೦೨೪-೨೫ನೇ ಸಾಲಿನಲ್ಲಿ ೬ ಗಡಿನಾಡು ಉತ್ಸವ ಕಾರ್ಯಕ್ರಮ ಆಯೋಜಿಸಿದೆ. ಈಗಾಗಲೇ ಕೇರಳದ ಬಂದಡ್ಕ, ಸುಳ್ಯ ತಾಲೂಕಿನ ಗಡಿ ಗ್ರಾಮವಾದ ಮಂಡೆಕೋಲು, ಕೊಡಗಿನ ಚೆಯ್ಯಂಡಾಣೆ ಮತ್ತು ಕುಶಾಲನಗರದಲ್ಲಿ ಅರೆಭಾಷೆ ಗಡಿನಾಡ ಉತ್ಸವ ಆಚರಿಸಲಾಗಿದೆ. ಭಾಗಮಂಡಲದ ಗಡಿನಾಡು ಉತ್ಸವ ತಾ. ೧೫ ರಂದು ಬೆಳಿಗ್ಗೆ ೯ ಗಂಟೆಗೆ ಭಾಗಮಂಡಲದ ಕರಿಕೆ ಗೇಟ್ ಬಳಿಯಿಂದ ಅರೆಭಾಷೆ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಆರಂಭ ವಾಗಲಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ೭೨ನೇ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಆದಿಚುಂಚನಗಿರಿ ಶಾಖಾಮಠ ಹಾಸನದ ಶಂಭುನಾಥ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷ ತಾವು ವಹಿಸಲಿದ್ದು, ಜಿಲ್ಲೆಯ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಕಾರ್ಯ ಕ್ರಮದ ಉದ್ಘಾಟನೆ ನೆರವೇರಿಸ ಲಿದ್ದಾರೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ೭೨ನೇ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದಿಕ್ಸೂಚಿ ಭಾಷಣಕಾರರಾಗಿ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ಪ್ರಕಾಶ್ ಭಾಗವಹಿಸಲಿದ್ದಾರೆ. ಸಾಂಪ್ರದಾಯಿಕ ವಸ್ತು ಪ್ರದರ್ಶನ ಉದ್ಘಾಟಕರಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಆಗಮಿಸಲಿದ್ದಾರೆ.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಧಕರನ್ನು ಸನ್ಮಾನಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಕಾಳನ ರವಿ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಂದ್ರಿರ ಮೋಹನ್‌ದಾಸ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷÀ ಕೊಲ್ಯದ ಗಿರೀಶ್, ಪಿ.ಸಿ. ಜಯರಾಮ, ಲಕ್ಷಿö್ಮನಾರಾಯಣ ಕಜೆಗದ್ದೆ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನಿರ್ದೇಶಕ ಹೊಸೂರು ಜೆ. ಸತೀಶ್ ಕುಮಾರ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಮಹಿಳಾ ಒಕ್ಕೂಟ ಇದರ ಅಧ್ಯಕ್ಷೆ ಅಮೆ ದಮಯಂತಿ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗಡಿನಾಡ ಉತ್ಸವ ೨೦೨೫ರ ಅಂಗವಾಗಿ ಬೆಳಿಗ್ಗೆ ೯.೩೦ ರಿಂದ ಶಿವಪ್ರಸಾದ್ ಆಲೆಟ್ಪಿ ಮತ್ತು ಬಳಗದವರಿಂದ ಅರೆಭಾಷೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೨ ಗಂಟೆಯಿAದ ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಮತ್ತು ಭಾಗಮಂಡಲ ನಾಡ್ ಗೌಡ ಯುವ ಒಕ್ಕೂಟ ಇವರಿಂದ ಅರೆಭಾಷೆ ರಸಪ್ರಶ್ನೆ ಕಾರ್ಯಕ್ರಮ, ಸಂಜೆ ೩ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ಸೂದನ ಎಸ್. ಈರಪ್ಪ, ಕುದುಪಜೆ ಕೆ. ಪ್ರಕಾಶ್, ಸಂದೀಪ್ ಪೂಳಕಂಡ, ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಇದ್ದರು.