ನಾಪೋಕ್ಲು, ಏ. ೧೨: ಸಂಪಾಜೆ ವಲಯದ ಚೆಂಬು ಗ್ರಾಮದಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಸಹಾಯಕ ವ್ಯಕ್ತಿಗಳ ಬದುಕು ಕಟ್ಟಿದ ವಾತ್ಸಲ್ಯ ಕಾರ್ಯಕ್ರಮ ರೂಪಿಸಿದ ಮಾತೃಶ್ರೀ ಹೇಮಾವತಿ ಅಮ್ಮನವರ ಹುಟ್ಟುಹಬ್ಬದಂದು ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜಿಲ್ಲೆಯ ನಿರ್ದೇಶಕಿ ಲೀಲಾವತಿ ಮತ್ತು ಧರ್ಮಸ್ಥಳ ಸಂಘದ ಒಕ್ಕೂಟದ ಅಧ್ಯಕ್ಷೆ ತಾರಾ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮಂಜುನಾಥ ಸ್ವಾಮಿಗೆ ದೀಪಬೆಳಗಿ ಹಾಲುಕ್ಕಿಸಿದರು. ವಾತ್ಸಲ್ಯ ಫಲಾನುಭವಿಯಾದ ನೀಲಮ್ಮ ಅವರಿಗೆ ನಿರ್ದೇಶಕಿ ಲೀಲಾವತಿ ಮನೆ ಹಸ್ತಾಂತರ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಸಾಶನ, ವಾತ್ಸಲ್ಯ ಕಾರ್ಯಕ್ರಮ, ಮಹಿಳೆಯರ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕ ಸಂತೋಷ್ ಸ್ವಾಗತಿಸಿದರು. ಗ್ರಾಮಸ್ಥ ರಮೇಶ್ ಯೋಜನೆಯ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ವಂದಿಸಿದರು.